ಅಂದದ ಮನೆಗೊಂದು ಚೆಂದದ ಹೆಸರು

ಅಂದದ ಮನೆಗೊಂದು ಚೆಂದದ ಹೆಸರು

ನನ್ನ ಚಡ್ಡಿ ದೋಸ್ತು ಮಲ್ಲು ಬೆಂಗಳೂರಿನಲ್ಲಿ ಬನಶಂಕರಿಯ ಏರಿಯಾದಲ್ಲಿ ಒಂದು ೪೦-೩೦ ಸೈಟ್ ಬಹಳ ಹಿಂದೆಯೇ ಖರೀದಿಸಿದ್ದ. ‘ಐಟಿ-ಬಿಟಿ’ ಖ್ಯಾತಿ ಇಂದಾಗಿ ಸೈಟು ಮನೆಗಳ ಬೆಲೆಗಳು ಆಕಾಶದತ್ತ ಜಿಗಿಯ ಹತ್ತಿದವು. ಮನೆ ಕಟ್ಟಲು ಈಗ ಸಮಯ ಸೂಕ್ತವಾಗಿದೆ ಎಂದೂ ಇನ್ನೂ ತಡ ಮಾಡುವುದು ಸರಿಯಲ್ಲವೆಂದೂ ತೀರ್ಮಾನಿಸಿ ದಂಪತಿಗಳಿಬ್ಬರಿಗೂ ಇಷ್ಟವಾಗುವಂತೆ ಪ್ಲಾನ್ ಬರೆಸಿ ಲೋನ್ ಸ್ಯಾಂಕ್ಷನ್ ಮಾಡಿಸಿಕೊಂಡ. ಗುದ್ದಲಿ ಪೂಜೆಯೂ ನೆರವೇರಿತು. ಆರು ತಿಂಗಳುಗಳ ಒಳಗೆ ‘ಗೃಹ ಪ್ರವೇಶ’ ಮಾಡುವಷ್ಟರ ಮಟ್ಟಿಗೆ ಕಟ್ಟಡ ಮೇಲೆದ್ದಿತು. ಸೂಕ್ತವಾದ ಹೆಸರು ಅವನಿಗೆ ಸಿಕ್ಕಿರಲಿಲ್ಲ. ಸ್ನೇಹಿತರುಗಳ ಬಳಿ ಪ್ರಸ್ತಾಪಿಸಿದ. ಕೆಲವು ಹೆಸರುಗಳು ಸೂಚಿಸಲ್ಪಟ್ಟರೂ ಸೂಕ್ತವಾಗಿರಲಿಲ್ಲ. “ಆ ಕೆಲಸವನ್ನು ಪುರೋಹಿತರಿಗೆ ಬಿಟ್ಟು ಬಿಡು; ಅವರೇ ನಿನ್ನ ಜಾತಕ ನೋಡುತ್ತಾ ಒಳ್ಳೆಯ ಹೆಸರು ಸೂಚಿಸಿಬಿಡುತ್ತಾರೆ.” ಎಂದು ನಾನು ಹೇಳಿದೆ.

“ಲೇ ಮಲ್ಲೀ, ಇವತ್ತು ಆಫೀಸಿನಿಂದ ಸಂಜೆ ಬೇಗ ಬರುತ್ತೇನೆ; ಪುರೋಹಿತರ ಮನೆಗೆ ಹೋಗಿ ‘ಗೃಹ ಪ್ರವೇಶ’ದ ಲಗ್ನ ಇಡಿಸಬೇಕು ಸಿದ್ಧವಾಗಿರು” ಎಂದು ಹೆಂಡತಿಗೆ ಹೇಳಿದ. ಇಬ್ಬರೂ ಸಂಜೆ ಪುರೋಹಿತರ ಮನೆ ಕಡೆ ಹೆಜ್ಜೆ ಹಾಕಿದರು.

ದಾರಿಯಲ್ಲಿ ಮಲ್ಲಿ ಗಂಡನನ್ನು ಮಾತಿಗೆ ಎಳೆದಳು. “ರೀ, ಮನೆಗೆ ಒಂದು ಒಳ್ಳೆಯ ಹೆಸರು ಇಡಬೇಕು; ಅದು ಹೇಗಿರಬೇಕು ಎಂದರೇ ಹಿಂದೆ ಯಾರೂ ಇಟ್ಟಿರಬಾರದು; ಅಪರೂಪದ್ದಾಗಿರಬೇಕು.” ಎಂದಳು. “ನಾನು ನನ್ನ ಸ್ನೇಹಿತರೊಂದಿಗೆ ಈ ವಿಚಾರ ಪ್ರಸ್ತಾಪ ಮಾಡಿದೆ; “ಇದನ್ನು ಪುರೋಹಿತರ ವಿವೇಚನಗೆ ಬಿಟ್ಟುಬಿಡು; ಏಕೆಂದರೆ ಶಾಸ್ತ್ರ ಸಮ್ಮತವಾಗಿರಬೇಕು. ಅವರೇ ಒಳ್ಳೆಯ ಹೆಸರು ಸೂಚಿಸುತ್ತಾರೆ ಎಂದರು. “ನಾವು ‘ಗೃಹಪ್ರವೇಶ’ಕ್ಕೆ ದಿನ ಗೊತ್ತು ಮಾಡಿದ ಬಳಿಕ ಇದನ್ನು ಪ್ರಸ್ತಾಪಿಸೋಣ.” ಎಂದ. ಪುರೋಹಿತರ ಮನೆ ಬಾಗಿಲು ತಟ್ಟಿದಾಗ ಅವರೇ ಖುದ್ದಾಗಿ ಅತಿಥಿಗಳನ್ನು ಒಳಕ್ಕೆ ಸ್ವಾಗತಿಸಿದರು. ಬಂದಿದ್ದ ಕಾರಣವನ್ನೆಲ್ಲಾ ವಿಶದವಾಗಿ ತಿಳಿಸಿದಾಗ ತುಂಬಾ ಸಂತೋಷಪಟ್ಟರು. ದಂಪತಿಗಳ ಚಾತಕಗಳನ್ನು ಪರಿಶೀಲಿಸಿದರು. ರಾಶಿ ನಕ್ಷತ್ರ, ಜನ್ಮಲಗ್ನ, ಎಲ್ಲವನ್ನೂ ಜಾಲಾಡಿ, ಮೀನಾ ಮೇಷ ಎಂದೆಲ್ಲಾ ಬೆರಳಾಡಿಸಿ ಸೂಕ್ತವಾದ ದಿನವನ್ನು, ಮುಹೂರ್ತದ ವೇಳೆಯನ್ನು ತಿಳಿಸಿದರು. ದಂಪತಿಗಳಿಗೆ ಒಪ್ಪಿಗೆ ಆಯಿತು.

“ಇದಲ್ಲಾ ಸರಿ ಹೋಯಿತು. ಆದರೆ ನಮ್ಮಮನೆಗೆ ಅಂದರೆ ಈಗ ಕಟ್ಟುತ್ತಿರುವ ಮನೆಗೆ ಸೂಕ್ತ ಹೆಸರು ಸರಿಯಾದ್ದು ಯಾವುದೂ ಸಿಕ್ತಿಲ್ಲ, ಒಳ್ಳೆಯ ಹೆಸರೊಂದನ್ನು ಸೂಚಿಸಿ. ಆದರೆ ಆ ಹೆಸರು ಸೂಕ್ತವಾಗಿರಬೇಕು. ಪೇಟೆಯಲ್ಲಿ ಹೆಸರುಗಳನ್ನು ಸೂಚಿಸುವ ಪುಸ್ತಕಗಳೇ ಖರೀದಿಗೆ ಸಿಗುತ್ತವೆ. ಅದರಲ್ಲಿ ಕಣ್ಣಾಡಿಸಿದಕ್ಕೆ ಒಂದೂ ಚಂದದ ಹೆಸರು ಸಿಗಲಿಲ್ಲ.” ಮಲ್ಲಿ ಮಾತು ಸೇರಿಸಿದಳು.

ಚಂದದ ಹೆಸರಿಗಾಗಿ ಪುರೋಹಿತರು ಮತ್ತೆ ಪಂಚಾಂಗದ ಮೊರೆ ಹೊಕ್ಕರು. ಕೊನೆಗೂ ಪರಿಹಾರ ದೊರೆಯಿತು. “ನೋಡಮ್ಮಾ ನಿಮ್ಮ ಹಾಗೂ ನಿಮ್ಮ ಯಜಮಾನರಿಗೆ ಪಂಚಾಂಗದ ಶಾಸ್ತ್ರದ ಪ್ರಕಾರ ಹೆಸರಿನ ಮೊದಲಕ್ಷರ ‘ಬ’ ಎಂದು ಆರಂಭವಾಗಬೇಕು. ಕಾಗುಣಿತದ ಅಭ್ಯಂತರವಿಲ್ಲ. ಉದಾಹರಣೆಗೆ ‘ಭಾಮಿನಿ’, ‘ಭಾನು’, ‘ಭಾಗ್ಯ ಲಕ್ಷ್ಮಿ’ ಎಂದೆಲ್ಲಾ ಆಗಬಹುದು. ‘ಬೆನಕ’ ಎಂದೂ ಆಗಬಹುದು.” ಎಂದು ಪುರೋಹಿತರು ಮಲ್ಲಿಯ ಗಮನ ಸೆಳೆದು ನುಡಿದರು. ‘ಈ ಹೆಸರುಗಳು ಮಾಮೂಲಿಯವು; ಕೊಂಚ ಅಪರೂಪವಾಗಿದ್ದರೆ ಚೆಂದ” ಎಂದಳು ಮಲ್ಲಿ. “ಹಾಗಾದರೆ ‘ಭುವನಜ’ ಅಥವಾ ‘ಭುವನೇಶ್ವರಿ’ ಆಗಬಹುದೋ” ಕೇಳಿದರು ಪುರೋಹಿತರು. ಮಲ್ಲಿ ಮಲ್ಲರು ಈ ಹೆಸರುಗಳನ್ನು ಒಪ್ಪಲಿಲ್ಲ. ಪುರೋಹಿತರಿಗೆ ಚಿಂತೆಗೆ ಇಟ್ಟುಕೊಂಡಿತು. ‘ಬ’ಕಾರ ಸೂಚಿಸಿದರೆ ನನ್ನನ್ನು ಒಳ್ಳೆ ‘ಬಕರನನ್ನಾಗಿ ಮಾಡುತ್ತಿದ್ದಾರಲ್ಲಾ’ ಎಂದು ಮನಸ್ಸಿನಲ್ಲೇ ನೊಂದುಕೊಂಡರು.

“ನೋಡಮ್ಮಾ ಏನೋ ಒಂದು ಒಳ್ಳೆಯ ಹೆಸರು ಇಟ್ಟರಾಯಿತು. ಇದಕ್ಕೆ ತಲೆಬಿಸಿ ಮಾಡಿಕೊಳ್ಳುವುದು ಏನೂ ಇಲ್ಲ; ಬೆಂಗಳೂರಿನಲ್ಲಿ ಒಂದು ಸೈಟು ಹೊಂದಿರುವುದೇ ಈಗ ಪ್ರೆಸ್ವೀಜ್ ಪ್ರಶ್ನೆ. ಅದರಲ್ಲೂ ನೀವು ಮನೆ ಕಟ್ಟಿರುತ್ತೀರಿ. ಭಾರೀ ಆಸ್ತಿವಂತರಾಗಿ ಬಿಟ್ಟರಿ. ಮನೆ ಎಂದರೆ – ಅದೂ ಸ್ವಂತದ್ದು ಎಂದ ಮೇಲೆ ಏನೆಂದು ತಿಳಿದಿರಿ; ನಿಮಗೆ ಪಾಪ, ತಿಳಿಯದು. ಅದೊಂದು ‘ಬೆಲೆ ಬಾಳುವ ರತ್ನ’ ಕಣಮ್ಮಾ. ಈಗ ನಿಮ್ಮ ಮೈ ಮೇಲೆ ಧರಿಸುವ ಚಿನ್ನದ ಒಡವೆಗಳು, ಬೆಳ್ಳಿ ಸಾಮಾನುಗಳು, ವಜ್ರ-ವೈಡೂರ್ಯ ಯಾವುದೇ ಇರಲಿ ಅದೆಲ್ಲವುಗಳಿಗಿಂತ ಹೆಚ್ಚು ‘ಬೆಲೆ ಬಾಳುವ ರತ್ನ’ವಲ್ಲದೆ ಮತ್ತೇನು? ಈ ದಿನದ ಬೆಲೆಗೆ ಮುಂದೆ ಒಂದು ದಿನ ಯಾರಾದರೂ ಖರೀದಿಸಲು ಕೇಳಿದರೆ ನೀವು ಈ ಬೆಲೆಗೇ ಕೊಟ್ಟು ಬಿಡುತ್ತೀರಾ?” ಎಂದೆಲ್ಲಾ ಪುರೋಹಿತರು ಕೊರೆದಾಗ ದಂಪತಿಗಳಿಬ್ಬರಿಗೂ ಜ್ಞಾನೋದಯವಾಯ್ತ. “ಹೌದು, ಪುರೋಹಿತರೇ ನಮಗೆ ಸಿಕ್ಕೇ ಬಿಟ್ಟತು!” ಇಬ್ಬರೂ ಒಕ್ಕೊರಳಲ್ಲಿ ನುಡಿದರು. “ಏನು ಆ ಹೆಸರು?” ಪುರೋಹಿತರು ಕೇಳಿದರು. “ಅದೇ ನೀವು ಹೇಳಿದಿರಲ್ಲಾ ‘ಬೆಲೆ ಬಾಳುವ ರತ್ನ’ ಅದನ್ನೇ ಮನಗೆ ಇಟ್ಟು ಬಿಡುತ್ತೇವೆ” ಎಂದರು. ಪುರೋಹಿತರಿಗೂ ಒಪ್ಪಿಗೆಯಾಯಿತು. ಅಂದದ ಮನೆಗೆ ಚಂದದ ಹೆಸರು ಸಿಕ್ಕಿದ್ದಾಕ್ಕಾಗಿ ಪುರೋಹಿತರಿಗೆ ವಂದಿಸಿದರು. ‘ಗ್ರಹಪ್ರವೇಶಕ್ಕೆ’ ಬಂದು ಆಮಂತ್ರಿಸಿದಾಗ ಬಂದು ಕಾರ್ಯ ನೆರವೇರಿಸಿ ಕೊಡಬೇಕೆಂದು ಪ್ರಾರ್ಥಿಸಿದರು. ಕಾಫಿ ಆತಿಥ್ಯ ಪಡೆದು ದಂಪತಿಗಳು ಜಾಗ ಖಾಲಿ ಮಾಡಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆನಪು
Next post ಸರಕಾರದ ಪರವಾಗಿ ನಾಯಕ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys